ದಿಸ್ಪುರ್: ನಕಲಿ ಬಿಲ್ ಪಾವತಿಗಾಗಿ ಸಹೋದ್ಯೋಗಿಗಳು ನೀಡುತ್ತಿದ್ದ ಕಿರುಕುಳ ಸಹಿಸಲಾಗದೇ ಮಹಿಳಾ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನಲ್ಲಿ (Assam) ನಡೆದಿದೆ.
ಲೋಕೋಪಯೋಗಿ ಇಲಾಖೆಯಲ್ಲಿ (PWD) ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜ್ಯೋತಿಷಾ ದಾಸ್(30) ಮೃತರು
ಮೃತ ಜ್ಯೋತಿಷಾ ಅಸ್ಸಾಂನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ ಆಕೆಯ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ. ಜೊತೆಗೆ ಡೆತ್ನೋಟ್ವೊಂದು ಸಿಕ್ಕಿದ್ದು, ಅದರಲ್ಲಿ ತಾನು ಕೆಲಸ ಮಾಡುತ್ತಿದ್ದ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಿ, ಇವರು ನಕಲಿ ಬಿಲ್ ಪಾವತಿಗಾಗಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.
ನಕಲಿ ಬಿಲ್ ಪಾವತಿಗಾಗಿ ಆ ಇಬ್ಬರು ಅಧಿಕಾರಿಗಳು ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಹೀಗಾಗಿ ನಾನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಇದೆಲ್ಲದರ ಒತ್ತಡದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಈ ಬಗ್ಗೆ ಹೇಳಿಕೊಳ್ಳಲು ನನಗೆ ಯಾರೂ ಇಲ್ಲ, ಸಾಕಾಗಿದೆ. ಎಲ್ಲಾದರೂ ಹೋಗಬೇಕು ಎಂದರೆ ಅದು ಬೇಡವಾಗಿದೆ. ಅಪ್ಪ, ಅಮ್ಮ ನನ್ನ ಬಗ್ಗೆ ತುಂಬಾ ಚಿಂತಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ.
ಈ ಕುರಿತು ಯುವತಿಯ ಕುಟುಂಬಸ್ಥರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಡೆತ್ನೋಟ್ ಆಧಾರದ ಮೇಲೆ ಇತ್ತೀಚೆಗೆ ಬಡ್ತಿ ಪಡೆದ ಸೂಪರಿಂಟೆಂಡೆಂಟ್ ಎಂಜಿನಿಯರ್, ಈ ಹಿಂದೆ ಬೊಂಗೈಗಾಂವ್ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ದಿನೇಶ್ ಮೇಧಿ ಶರ್ಮಾ ಹಾಗೂ ಬೊಂಗೈಗಾಂವ್ನಲ್ಲಿ ಲೋಕೋಪಯೋಗಿ ಇಲಾಖೆಯ ಉಪವಿಭಾಗಾಧಿಕಾರಿಯಾಗಿರುವ ಅಮೀನುಲ್ ಇಸ್ಲಾಂ ಇಬ್ಬರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಅಸ್ಸಾಂ ಮುಖ್ಯಮಂತ್ರಿ (Assam CM) ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಪ್ರಕರಣ ಸಂಬಂಧ ವಿವರವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.
Assam
engineer
Fake Bills
Public Works DepartmentPublic Works Department
Senior Officials