ಅಫಜಲಪುರ 17 ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಎನಿಸಿಕೊಂಡಿರುವ ದೇವಲ ಗಾಣಗಾಪುರದಲ್ಲಿ ನೆಲೆಸಿರುವ ಶ್ರೀಗುರು ದತ್ತಾತ್ರೇಯ ಮಹಾರಾಜರ ಧಾರ್ಮಿಕ ಸ್ಥಳವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿದೆ,ಹೀಗಾಗಿ ಈ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಬೇಕೆಂದು ಸಾಮಾಜಿಕ ಹೋರಾಟಗಾರ ಶಿವಕುಮಾರ ನಾಟೀಕಾರ ಮನವಿ ಮಾಡಿಕೊಂಡಿದ್ದಾರೆ.ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ಗುರುವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿ ಮಾತನಾಡಿದ ಅವರು,ಭೀಮಾ ಮತ್ತು ಅಮರ್ಜಾ ನದಿಗಳ ಪವಿತ್ರ ಸಂಗಮ ಸ್ಥಳದಲ್ಲಿ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಿರ್ಗುಣ ಪಾದುಕಗಳ ದರ್ಶನ ಭಾಗ್ಯಕ್ಕಾಗಿ ದಿನನಿತ್ಯ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶ ವಿದೇಶಗಳ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಬಂದು ಹೋಗುತ್ತಾರೆ.ಆದರೆ ದೇವಸ್ಥಾನ ಮಾತ್ರ ಇಲ್ಲಿವರೆಗೂ ಯಾವುದೇ ಅಭಿವೃದ್ಧಿ ಹೊಂದಿಲ್ಲ, ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಈ ದೇವಸ್ಥಾನವು ಸರ್ಕಾರಕ್ಕೆ ಕೇವಲ ಆದಾಯದಾಯಕ ದೇವಸ್ಥಾನವಾಗಿದೆ ಮಾತ್ರ ಅಭಿವೃದ್ಧಿ ಮಾತ್ರ ಶೂನ್ಯ. ದತ್ತಾತ್ರೇಯ ಮಹಾರಾಜರ ದೇವಸ್ಥಾನ ಮತ್ತು ಸಂಗಮದಲ್ಲಿ ನೂತನ ವಿನ್ಯಾಸದಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕು, ನದಿಯಿಂದ ದೇವಸ್ಥಾನಕ್ಕೆ ಘಾಟ್ ನಿರ್ಮಾಣ, ಉತ್ತಮ ರಸ್ತೆಗಳ ನಿರ್ಮಾಣ, ಪಾರ್ಕಿಂಗ್, ಯಾತ್ರಿ ನಿವಾಸ ಮತ್ತು ಆಧುನಿಕ ಮಾದರಿಯ ಅನ್ನಪ್ರಸಾದ ನಿಲಯ, ಸುಸಜ್ಜಿತ ಶೌಚಾಲಯ ಮತ್ತು ಸ್ನಾನ ಗೃಹಗಳು, ಶುದ್ಧ ಕುಡಿಯುವ ನೀರು, ಸುರಕ್ಷತಾ ದೃಷ್ಟಿಯಿಂದ ಅಗತ್ಯ ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವುದು ಅತ್ಯಗತ್ಯವಾಗಿದೆ.ಹಾಗಾಗಿ ಎಲ್ಲಾ ಧರ್ಮೀಯರ ಪಾಲಿಗೆ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ದೇವಲ ಗಾಣಗಾಪುರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 200 ಕೋಟಿ ರೂ. ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದರು.
ಶ್ರೀ ವೀರಮಹಾಂತ ಶಿವಾಚಾರ್ಯರು ಮಾತನಾಡಿ,ದೇಶದಲ್ಲಿರುವ ವಿವಿಧ ದೇವಸ್ಥಾನಗಳು ಅಭಿವೃದ್ಧಿ ಹೊಂದಿವೆ,ಆದರೆ ದತ್ತಾತ್ರೇಯ ದೇವಸ್ಥಾನ ಸಾಕಷ್ಟು ಹಿಂದುಳಿದಿದೆ,ಹೀಗಾಗಿ ಇಂದು ಹೋರಾಟ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.ನಾವೆಲ್ಲರೂ ಒಂದಾಗಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು,ಅಂದಾಗ ಮಾತ್ರ ಈ ಹೋರಾಟ ಯಶಸ್ವಿಯಾಗಿ ದತ್ತ ಮಹಾರಾಜರ ದೇವಸ್ಥಾನ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.ಹೋರಾಟಗಾರ ಶಿವಕುಮಾರ ನಾಟೀಕಾರ ನಿರಂತವಾಗಿ ಇಂತಹ ಅನೇಕ ಹೋರಾಟಗಳನ್ನು ಕೈಗೊಂಡು ಯಶಸ್ವಿಗೊಳಿಸಿದ್ದಾರೆ.ಅದೇ ರೀತಿ ಈ ಹೋರಾಟವು ಯಶಸ್ವಿಯಾಗಲಿ ಎಂದು ಹಾರೈಸಿದರು.
ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನವನ್ನು ಸಮಗ್ರ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಈ ಹೋರಾಟಕ್ಕೆ ಬೆಂಬಲಿಸುವ ಮೂಲಕ ಗಾಣಗಾಪುರ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವವರಿಗೂ ಸತ್ಯಾಗ್ರಹ ಕೈ ಬಿಡುವುದಿಲ್ಲ.
-ಶಿವಕುಮಾರ ನಾಟೀಕಾರ ಸಾಮಾಜಿಕ ಹೋರಾಟಗಾರ ಅಫಜಲಪುರ.
ಈ ಸಂದರ್ಭದಲ್ಲಿ ಶ್ರೀ ಚನ್ನಶೇಖರ ಶಿವಾಚಾರ್ಯರು, ಶ್ರೀ ಶಿವಾನಂದ ಮಹಾಸ್ವಾಮಿಗಳು,ಶ್ರೀ ಬಸವ ಮಹಾಸ್ವಾಮಿಗಳು, ಶ್ರೀ ಮುರಳಾರಾಧ್ಯ ಶಿವಾಚಾರ್ಯರು, ಮುಖಂಡರಾದ ಸಾಮಾಜಿಕ ಹೋರಾಟಗಾರ ಅಮರೇಶಣ್ಣ ಕಾಮನಕೇರಿ, ಮಾರುತಿ ಮೂರನೇತ್ತಿ,ತಿಪ್ಪಣ್ಣ ಚಿನ್ಮಳ್ಳಿ,ಖಾಜಾಸಾಬ ಚೌಗಡಿ, ಮಲ್ಲಿಕಾರ್ಜುನ ಸಿಂಗೆ,ರಾಜಕುಮಾರ ಉಕ್ಕಲಿ, ದತ್ತು ಹೇರೂರ, ಜಮೀರ್ ಗೌಂಡಿ, ಸಿದ್ದು ಡಾಂಗೆ, ದಿಗಂಬರ ಡಾಂಗೆ,ಭಾಗಪ್ಪ ವಡಗೇರಿ,ಮಹೆಬೂಬ ತಾಂಬೋಳಿ, ಈರಣ್ಣ ಹಾಗರಗುಂಡಗಿ,ರಾಜು ಜಮಾದಾರ,ಕಾಂತು ಮಾವುರ, ರಾಜೇಂದ್ರ ಸರ್ದಾರ್,ವಿಜಯ ವಡಗೇರಿ,ಮರೇಪ್ಪ ಜಮಾದಾರ, ಯಲ್ಲಪ್ಪ ರಾಮಗಾ,ಅಮೂಲ್ ಮೂರೆ, ರಾಜು ಜಮಾದಾರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ದೇವಸ್ಥಾನದ ಅರ್ಚಕರಿಂದ ಬೆಂಬಲ
ಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡಿರುವ ಸಾಮಾಜಿಕ ಹೋರಾಟಗಾರ ಶಿವಕುಮಾರ ನಾಟೀಕಾರ ಹೋರಾಟಕ್ಕೆ ದೇವಸ್ಥಾನದ ಅರ್ಚಕರಿಂದ ಸಂಪೂರ್ಣ ಬೆಂಬಲ ನೀಡಿದರು.ಈ ಸಂದರ್ಭದಲ್ಲಿ ಪ್ರಿಯಾಂಕ್ ಭಟ್ ಪೂಜಾರಿ, ಉದಯ ಭಟ್ ಪೂಜಾರಿ, ಶ್ರೀಪಾದ್ ಭಟ್ ಪೂಜಾರಿ, ಗಂಗಾಧರ ಭಟ್ ಪೂಜಾರಿ,ಮಹೇಶ್ ಭಟ್ ಪೂಜಾರಿ ಸೇರಿದಂತೆ ಅರ್ಚಕರಿಂದ ಬೆಂಬಲ ಘೋಷಣೆ ಮಾಡಿದರು.
ಬೇಡಿಕೆಗಳು:
(1) ಶ್ರೀ ಕ್ಷೇತ್ರ ದೇವಲ ಗಾಣಗಾಪುರ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಶ್ರೀ ದತ್ತಾತ್ರೇಯ ಮಹಾರಾಜರ ದೇವಸ್ಥಾನ ಮತ್ತು ಸಂಗಮ ಸ್ಥಳದಲ್ಲಿ ನೂತನ ವಿನ್ಯಾಸದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ, ಕಾಶಿ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು.ಆ ಮೂಲಕ ಪ್ರಸಿದ್ಧ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು.
(2)ದೇವಲ ಗಾಣಗಾಪುರ ದೇವಸ್ಥಾನದ ಸುತ್ತಮುತ್ತಲಿನ ಪ್ರಾಂಗಣ ಹಾಗೂ ರಸ್ತೆಗಳ ಅಗಲೀಕರಣ ಕೈಗೊಂಡು ಆಧುನಿಕ ಮಾದರಿಯಲ್ಲಿ ಕಾರಿಡಾರ್ ಅಭಿವೃದ್ಧಿ ಪಡಿಸಬೇಕು ಮತ್ತು ಸಂಗಮದಲ್ಲಿ “ಅಷ್ಟ ತೀರ್ಥ”ಗಳಿಗೆ ಉತ್ತಮ ಪದಾಚಾರಿ ರಸ್ತೆ ನಿರ್ಮಾಣ ಮಾಡಬೇಕು.
(3) ಸುಸಜ್ಜಿತವಾದ ವಿಶಾಲವಾದ ಯಾತ್ರಿಕ ನಿವಾಸವನ್ನು ನಿರ್ಮಿಸಿ, ಆಧುನಿಕ ಮಾದರಿಯ ಅನ್ನಪ್ರಸಾದ ನಿಲಯ ನಿರ್ಮಾಣ ಮಾಡಬೇಕು.
(4)ಭೀಮಾ-ಅಮರ್ಜಾ ನದಿಗಳನ್ನು ಸ್ವಚ್ಛಗೊಳಿಸಿ “ಅಷ್ಟ ತೀರ್ಥ”ಗಳನ್ನು ಸುಂದರವಾಗಿ ನಿರ್ಮಿಸಬೇಕು, ಎರಡೂ ನದಿಗಳ ದಡದಲ್ಲಿ ಸುಸಜ್ಜಿತ ಘಾಟ್ ನಿರ್ಮಿಸಬೇಕು.ದೇವಲ ಗಾಣಗಾಪುರ ಬ್ಯಾರೇಜ್ ನಿಂದ ಸಂಗಮದವರೆಗೆ ವಿಶೇಷವಾಗಿ ಸೌಂದರ್ಯೀಕರಣಗೊಳಿಸಿ ಬೃಹತ್ ಉದ್ಯಾನವನ ನಿರ್ಮಿಸಬೇಕು.
(5)ದೇವಲ ಗಾಣಗಾಪುರ ಮತ್ತು ಸಂಗಮದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಹೈ ಟೆಕ್ ಶೌಚಾಲಯ ಮತ್ತು ಸ್ನಾನ ಗೃಹಗಳನ್ನು ನಿರ್ಮಿಸಿ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಬೇಕು.